ಓಬು ಸೇರಿಗಾರ್ ನಿಧನ
ಕರಾವಳಿ ಜಿಲ್ಲೆಗಳ ಹಿರಿಯ ನಾಗಸ್ವರ ಸ್ಯಾಕ್ಸೋಫೋನ್ ಕಲಾವಿದ ,ಗುರು ,ಓಬು ಸೇರಿಗಾರ (83)
ಶನಿವಾರ ರಾತ್ರಿ ವೃದ್ಧಾಪ್ಯದ ಕಾರಣದಿಂದ ನಿಧನರಾದರು.
ಉಡುಪಿಯ ಕೃಷ್ಣ ಮಠದಲ್ಲಿ 50ವರ್ಷಗಳಿಗೂ ಅಧಿಕ ಕಾಲ ಆಸ್ಥಾನ ಕಲಾವಿದರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ ಅಷ್ಟಮಠಾಧೀಶರುಗಳ ಪ್ರಶಂಸೆಗೆ ಪಾತ್ರರಾಗಿದ್ದ ಓಬು ಸೇರಿಗಾರ್ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ಸ್ಥಳೀಯ ಆಸುಪಾಸಿನ ಅನೇಕ ದೇವಸ್ಥಾನಗಳಲ್ಲೂ ತಮ್ಮಕಲಾಸೇವೆ ಸಲ್ಲಿಸಿದ್ದರು.
ಕಾಂಚನ ವೆಂಕಟಸುಬ್ರಹ್ಮಣ್ಯ ಅಯ್ಯರ್ ಅವರಲ್ಲಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದ ಓಬು ಸೇರಿಗಾರ್ ,ತಮ್ಮ ಶುದ್ಧ ,ಸಂಪ್ರದಾಯ ಬದ್ಧ ನಾಗಸ್ವರ ಸ್ಯಾಕ್ಸೋಫೋನ್ ವಾದನದಿಂದ ಪ್ರಸಿದ್ಧರಾಗಿದ್ದರು.
ಕಲಾಸೇವೆಯ ಜೊತೆಗೆ ಸುಮಾರು 160ಕ್ಕಿಂತಲೂ ಅಧಿಕ ಶಿಷ್ಯರಿಗೆ ವಾದ್ಯವಿದ್ಯೆಯನ್ನು ಶ್ರದ್ಧೆಯಿಂದ ಧಾರೆಯೆರೆದು ಕರಾವಳಿ ಜಿಲ್ಲೆಗಳಲ್ಲಿ ವಾದ್ಯ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿದ್ದರು.ತಮ್ಮ ಕಲಾಸೇವೆಗಾಗಿ ಉಡುಪಿಯ
ಅಷ್ಟಮಠಾಧೀಶರು ವಿಶೇಷ ಗೌರವಕ್ಕೆ ಪಾತ್ರರಾಗಿದ್ದ ಅವರನ್ನು ಸಂಸ್ಕಾರ ಭಾರತಿ ಉಡುಪಿ, ಕಲಾವೃಂದ (ರಿ), ರಾಗಧನ (ರಿ)ಸೇರಿದಂತೆ ಅನೇಕ ಸಂಘಸಂಸ್ಥೆಗಳು ಸಂಮಾನಿಸಿದ್ದರು.ಉಡುಪಿಯಲ್ಲಿ ಸಾರ್ವಜನಿಕರು ಮತ್ತು ಅವರ ಶಿಷ್ಯರು 2008ರಲ್ಲಿ ಉಡುಪಿ ರಥಬೀದಿಯಲ್ಲಿ ವೈಭವದಿಂದ ಅಭಿನಂದಿಸಿ ಗೌರವಿಸಿದ್ದರು.
ಮೃತರರು ಪತ್ನಿ ,ಪುತ್ರಿ ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.
ಸಂತಾಪ :
ಓಬು ಸೇರಿಗಾರ ನಿಧನಕ್ಕೆ ಪೇಜಾವರ ಶ್ರೀ ವಿಶ್ವೇಶತೀರ್ಥರು ,ಶ್ರೀ ವಿಶ್ವಪ್ರಸನ್ನ ತೀರ್ಥರು, ಕೃಷ್ಣಾಪುರ ಅದಮಾರು ,ಫಲಿಮಾರು , ಪುತ್ತಿಗೆ ಶೀರೂರು ,ಕಾಣಿಯೂರು ,ಸೋದೆ ಶ್ರೀಗಳು ಸಂತಾಪ ವ್ಯಕ್ತಪಡಿಸಿದ್ದಾರ. ಸಂಸ್ಕಾರ ಭಾರತಿ , ಯಕ್ಷಗಾನ ಕಲಾರಂಗ ,ರಾಗಧನ ಉಡುಪಿಯ ದೇವಾಡಿಗರ ಸಮಾಜ ಸೇವಾ ಸಂಘ ಸಂತಾಪ ವ್ಯಕ್ತಪಡಿಸಿವೆ ..ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ,ಮಾಜಿ ಶಾಸಕ ಕೆ ರಘುಪತಿ ಭಟ್ ಶೋಕ ವ್ತಕ್ತಪಡಿಸಿದ್ದಾರೆ.
Comments
Post a Comment